Tuesday 5 January 2021

ಅಳುವಾ ನೇಗಿಲ ಯೋಗಿಯ ನೋಡಲ್ಲಿ !--ಶಾಂತಾರಾಮ ನಾಯಕ ಹಿಚ್ಕಡ

ಬಿರುಬಿಸಿಲಲಿ ಹಗಲಿರುಳೆನ್ನದೆ ಹದಮಾಡಿ ಹೊಲಕಾದು ಮಳೆಗಾಗಿ ಸುಸ್ತಾಗಿ ಕೊನೆಗೂ ಮಳೆ ಬಾರದೆ ಬೆಳೆ ಇಲ್ಲದೆ ನಿಟ್ಟುಸಿರು ಬಿಡುತ ಹೊಲದೊಳು ಅಳುವಾ ನೇಗಿಲ ಯೋಗಿಯ ನೋಡಲ್ಲಿ | ಗೆದ್ದವರೆದ್ದು ರೈತರ ಹೆಸರಲಿ ಘೋರ ಪ್ರತಿಜ್ಞೆ ಗೈದರು ಗಾಂಧಿ ಪ್ರತಿಮೆಗೆ ಮೊದಲ್ ವಂದಿಪೆ ಎಂದರು! ಆದರೂ ಬಿತ್ತನೆ ಬೀಜದ ಕೊರತೆ ತಪ್ಪಲೇ ಇಲ್ಲ ಗೊಬ್ಬರಕಾಗಿ ಹಾಹಾಕಾರ | ಮಳೆಬೆಳೆ ಇಲ್ಲದೆ ಕಂಗಾಲಾಗಿ ಸಹಿಸಲಾರದೆ ಸಾಲಶೂಲದ ತಿವಿತ ಬದುಕಲು ಆಗದೆ ಸಾಯಲು ಆಗದೆ ಧರ್ಮ ಸಂಕಟದಿ ಸಿಲುಕಿ ಅಳುವಾ ನೇಗಿಲ ಯೋಗಿಯ ನೋಡಲ್ಲಿ! ರೈತರ ಹೆಸರಲಿ ದರ್ಪದಿ ಆಳುತ ರೈತನೇ ದೇಶದ ಬೆನ್ನೆಲುಬೆನ್ನುತ ಬೆನ್ನಿಗೆ ಲಾಟಿಯ ಏಟನು ಕೊಟ್ಟು ರೈತರ ಬಂಡಾಯಕೆ ಗೊಳೀಬಾರಿನ ಉತ್ತರ ನೀಡಿ ಲೋಕಕೆ ಅನ್ನವನೀಯುವ ರೈತರ ಬಾಳಿಗೆ ಕಿಚ್ಚನ್ನಿಡುವ ಕಳ್ಳಕದೀಮರ ಕಂಡು ಅಳುವಾ ನೇಗಿಲ ಯೋಗಿಯ ನೋಡಲ್ಲಿ | ಕಸಿದು ಬಲಾತ್ಕಾರದಿ ರೈತರ ಭೂಮಿಯನು ನಿರ್ಮಿಸಿ ಮೋಜಿನ ತಾಣಗಳನು ಅಭಿವೃದ್ಧಿ ಹೆಸರಲಿ ಹಳ್ಳಿಗಳ ಕಬಳಿಸಿ ಉದ್ದಿಮೆದಾರರ ಹಿತಕೆ ಬಡ ರೈತರ ಬಲಿ | ನಗರವ ಬೆಳೆಯಿಸಿ ನಾಕವ ನರಕವ ಮಾಡಿ ನೀಡದೆ ಬೆಂಬಲ ಬೆಲೆ ಮುರಿಯುತ್ತಿದ್ದಾರೆ ರೈತರ ಬೆನ್ನೆಲುಬು ಅಳುವಾ ನೇಗಿಲ ಯೋಗಿಯ ನೋಡಲ್ಲಿ | ಕೋಟಿ ಕೋಟಿ ಸಾಲಮನ್ನಾದ ಉಡುಗೊರೆ ಉದ್ದಮೆದಾರರಿಗೆ! ನೇಣಿನ ಉಡುಗೊರೆ ಬಡಪಾಯಿ ಅನ್ನದಾತರಿಗೆ ರೈತರ ಬಲವನು ಕುಲವನು ಕುಗ್ಗಿಸಿ ವಂಚನೆ ಮಂತ್ರವ ಪಠಿಸುತ ಬಾಯಲಿ ಹೊಗಳಿಕೆ ಹಾರವ ತೊಡಿಸಿದರೇನು ಫಲ? ಹೊಟ್ಟೆಗೆ ಹಿಟ್ಟೇ ಇಲ್ಲ ಜುಟ್ಟಿಗೆ ಮಲ್ಲಿಗೆ ಏತಕೆ ಕೆರಳಿ ಕೆಂಡವಾಗಿ ರೈತರು ಬದುಕುವ ಹಕ್ಕನ್ನೇ ಕಸಿದುಕೊಂಡ ಬಂಡ ಸರಕಾರಕೆ ಹಿಡಿ ಶಾಪವ ಹಾಕುತ ಅಳುವಾ ನೇಗಿಲ ಯೋಗಿಯ ನೋಡಲ್ಲಿ | ಈ ಪರಿ ನೇಗಿಲ ಯೋಗಿಯ ದುಃಸ್ಥಿತಿ ಕಂಡು ಕಡುನೊಂದು ಮನದಲಿ ರಸ ಋಷಿ ಕುವೆಂಪು ಕಣ್ಣೀರಿಡುತಲಿಹರು ಸ್ವರ್ಗದಲಿ! ಶಾಂತಾರಾಮ ನಾಯಕ ಹಿಚ್ಕಡ

No comments:

Post a Comment